ರಾಜ್ಯ ವಾರ್ತೆ

ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿಲ್ಲ – ನಟ ಚೇತನ್ ವಿವಾದಾತ್ಮಕ ಹೇಳಿಕೆ

ಬೆಳ್ತಂಗಡಿ : ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ದೇಶಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಸಿನಿ ಪ್ರೇಕ್ಷಕರು ಮಾತ್ರವಲ್ಲ, ಚಿತ್ರರಂಗದ ಮಂದಿಯೂ ಕಾಂತಾರಕ್ಕೆ ಜೈ ಅಂದಿದ್ದಾರೆ. ತುಳುನಾಡಿನ ದೈವಾರಾಧನೆ, ಕಂಬಳ, ಆಚರಣೆ, ಸಂಸ್ಕೃತಿಯ ಕುರಿತಾದ ಕಥೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಕಾಂತಾರದಲ್ಲಿ ರಿಷಬ್ ಅಭಿನಯಕ್ಕೆ ಭೇಷ್ ಎಂದಿದ್ದಾರೆ. ಈ ಮಧ್ಯೆ ಸಿನಿಮಾ ನೋಡಿದ ನಟ ಚೇತನ್ ವಿವಾದಾತ್ಮಕ ಹೇಳಿಕೆ ನೀಡಿದ್ದು ತುಳುವರನ್ನು ಕೆರಳಿಸಿದೆ.

ಕಾಂತಾರ ಸಿನಿಮಾ ನೋಡಿದ ನಟ ಚೇತನ್ ಟ್ವಿಟ್ ಮಾಡಿದ್ದು, ರಿಷಬ್ ಸುಳ್ಳು ಹೇಳಿದ್ದಾರೆ. ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ ಎಂದಿದ್ದಾರೆ. ನಮ್ಮ ಕನ್ನಡ ಚಿತ್ರ ಕಾಂತಾರ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿ ತಂದಿದೆ.
ಭೂತಕೋಲ ಹಿಂದೂ ಸಂಸ್ಕೃತಿ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.
ಆದರೆ ಅದು ಸುಳ್ಳು, ನಮ್ಮ ಬಹುಜನ ಸಂಪ್ರದಾಯಗಳು ವೈದಿಕ ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆ ಮತ್ತು ಹೊರಗೆ ಸತ್ಯದೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಅಂತ ಚೇತನ್ ಬರೆದುಕೊಂಡಿದ್ದಾರೆ.
ಚೇತನ್ ಹೇಳಿಕೆ ಕುರಿತು ರಿಷಬ್ ಶೆಟ್ಟಿ ಆಗಲಿ, ಸಿನಿಮಾ ತಂಡವಾಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದ್ರೆ ಸೋಷಿಯಲ್‌ ಮೀಡಿಯಾದಲ್ಲಿ ಚೇತನ್ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ತುಳುನಾಡಿನ ಲಕ್ಷಾಂತರ ಹಿಂದೂಗಳು ಪೂಜಿಸುವ, ಆರಾಧಿಸುವ, ನಂಬುವ ದೈವಾರಾಧನೆಯನ್ನು ಹಿಂದೂಗಳ ಸಂಸ್ಕೃತಿಯಲ್ಲ ಎಂದಿರುವ ಚೇತನ್ ಅನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಸದಾ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಚೇತನ್ ಈ ಬಾರಿ ದೈವಾರಾಧನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ತುಳುವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಿಮ್ಮದೊಂದು ಉತ್ತರ