ಜಿಲ್ಲಾ ವಾರ್ತೆ

ಬೈಕ್‌ನಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧಿಸಿದ ಆದೇಶ ಕೆಲವೇ ಗಂಟೆಗಳಲ್ಲಿ ವಾಪಸ್

 

ಮಂಗಳೂರು: ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಾಳೆಯಿಂದ ಬೈಕ್‌ನಲ್ಲಿ ಹಿಂಬದಿ ಯುವ ಪುರುಷ ಸವಾರರಿಗೆ ನಿರ್ಬಂಧಿಸಿದ ಆದೇಶವನ್ನು ಕೆಲವೇ ಗಂಟೆಗಳಲ್ಲಿ ವಾಪಸ್ ಪಡೆಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆ ನಡೆದ ಬಳಿಕ ಜಾರಿಯಲ್ಲಿದ್ದ ರಾತ್ರಿ ನಿಷೇಧಾಜ್ಞೆಯು ನಾಳೆ ಬೆಳಿಗ್ಗೆ ತೆರವಾಗಲಿದೆ.

ಇಂದು ಎಡಿಜಿಪಿ ಅಲೋಕ್ ಕುಮಾರ್ ಅವರು ನಡೆಸಿದ ಸಭೆಯ ಬಳಿಕ ರಾತ್ರಿ ಕರ್ಪ್ಯೂ ಸಡಿಲಿಕೆ ಬಳಿಕ ಬೈಕ್‌ನಲ್ಲಿ ಹಿಂಬದಿ ಯುವ ಪುರುಷ ಸವಾರರಿಗೆ ನಿರ್ಬಂಧ ವಿಧಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದರಂತೆ ಸಂಜೆ 4 ಗಂಟೆಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರು ಆಗಸ್ಟ್ 5ರಿಂದ ಆಗಸ್ಟ್ 8ರ ಬೆಳಗ್ಗೆವರೆಗೆ ಸಂಜೆ 6ರಿಂದ ಬೆಳಿಗ್ಗೆ 6ವರೆಗೆ 18 ವರ್ಷಕ್ಕೆ ಮೇಲ್ಪಟ್ಟ 60 ವರ್ಷದೊಳಗಿನ ಪುರುಷರ ಬೈಕ್ ಪ್ರಯಾಣಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರು.ಆದರೆ ಹಿಂಬದಿ ಸವಾರರಿಗೆ ನಿರ್ಬಂಧ ಆದೇಶಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಲು ಆರಂಭವಾಗಿದೆ. ಈ ಆದೇಶವನ್ನು ಸಂಜೆ 5 ಗಂಟೆಯ ಮೊದಲೇ ವಾಪಸ್ ಪಡೆಯಲಾಗಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡ ರಾತ್ರಿ ಕರ್ಪ್ಯೂ ಸಡಿಲಿಕೆ:

ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿ ಕರ್ಪ್ಯೂ ಸಡಿಲಿಕೆ ಮಾಡಲಾಗಿದೆ. ಸಂಜೆ 6ರಿಂದ ಬೆಳಗ್ಗೆ 6ರವರೆಗೆ ರಾತ್ರಿ ನಿರ್ಬಂಧದ ಆದೇಶ ನಾಳೆ ಬೆಳಗ್ಗೆ 6 ಗಂಟೆಗೆ ಕೊನೆಗೊಳ್ಳಲಿದೆ. ನಾಳೆಯಿಂದ ರಾತ್ರಿ ನಿರ್ಬಂಧದಲ್ಲಿ ಸಡಿಲಿಕೆ ಮಾಡಲಾಗಿದ್ದು ಜಿಲ್ಲೆಯಾದ್ಯಂತ ರಾತ್ರಿ 9 ಗಂಟೆಯವರೆಗೆ ಅಂಗಡಿ ತೆರೆಯಬಹುದಾಗಿದೆ. ಅದೇ ರೀತಿ ನಾಳೆಯಿಂದ ಸಂಜೆ 6 ಗಂಟೆಯವರೆಗೆ ಮದ್ಯದಂಗಡಿ ತೆರೆಯಲು ಅವಕಾಶ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ