ಬೆಳ್ತಂಗಡಿ: ವಿಟ್ಲ ಸಮೀಪದ ಕಂಬಳಬೆಟ್ಟು ಬದನಾಜೆ ಎಂಬದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ತಣ್ಣೀರುಪಂತ ಗ್ರಾಮದ ಅಳಕೆ ಮಸೀದಿ ಬಳಿಯ ನಿವಾಸಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿ ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಫೆ.೨೫ರಂದು ವರದಿಯಾಗಿದೆ.
ತಣ್ಣೀರುಪಂತ ಗ್ರಾಮದ ಅಳಕೆ ಮಸೀದಿ ಬಳಿಯ ನಿವಾಸಿ ಇಸ್ಮಾಯಿಲ್(೨೨ವ) ಈ ದುರ್ಘಟನೆಯಲ್ಲಿ ಮೃತಪಟ್ಟರು. ಬೈಕ್ನ ಹಿಂಬದಿ ಸವಾರ ಮೃತ ಇಸ್ಮಾಯಿಲ್ ಅವರ ದೊಡ್ಡಪ್ಪ ಅಬ್ಬಾಸ್(೫೨ವ) ಗಂಭೀರಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರು ವಿಟ್ಲದಲ್ಲಿ ತಮ್ಮ ಸಂಬಂಧಿಕರ ಮದುವೆಗೆ ಹೋದವರು ಕಾರ್ಯಕ್ರಮ ಮುಗಿದ ಬಳಿಕ ಬೈಕಿನಲ್ಲಿ ಬರುತ್ತಿರುವ ಸಂದರ್ಭದಲ್ಲಿ
ಕಂಬಳಬೆಟ್ಟು ಬದನಾಜೆ ಎಂಬಲ್ಲಿ ಪುತ್ತೂರಿನಿಂದ ವಿಟ್ಲದ ಕಡೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಘಟನೆಯಿಂದ ಬೈಕ್ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.