ಬೆಳ್ತಂಗಡಿ: ಕರ್ನಾಟಕ ಸರಕಾರದ ಅರಣ್ಯ ಪರಿಸರ ವಿಜ್ಞಾನ ಮತ್ತು ಜೀವಶಾಸ್ತ್ರ ಇಲಾಖಾ ಸಚಿವ ಅರವಿಂದ ಲಿಂಬಾವಳಿ ಎ.೨೪ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ೧೦೦ ಎಕ್ರೆ ಜಾಗವನ್ನು ಗುರುತಿಸಿ, ಜಪಾನಿನ ಮಿಯಾವಾಕಿ ಮಾದರಿಯಲ್ಲಿ ಅರಣ್ಯ ಬೆಳೆಸುವ ಯೋಜನೆ ರೂಪಿಸಬೇಕು. ಮುಂದಿನ ಜೂನ್ ೫ರ ವಿಶ್ವ ಪರಿಸರ ದಿನಾಚರಣೆಯ ದಿನದಂದು ಇದಕ್ಕೆ ಚಾಲನೆ ನೀಡಬೇಕು ಎಂದು ಹೇಳಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಇಂದು ಅರಣ್ಯ ಕಡಿಮೆಯಾಗುತ್ತಿರುವುದರಿಂದ ಕಾಡು ಪ್ರಾಣಿಗಳು ಊರಿಗೆ ಬರುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಡಿನಲ್ಲಿ ಅದಕ್ಕೆ ಬೇಕಾದ ಆಹಾರ ದೊರೆಯಬೇಕು. ಆಹಾರಕ್ಕಾಗಿ ಫಲಬರುವಂತಹ ಹಣ್ಣು-ಹಂಪಲು ಗಿಡಗಳನ್ನು ನೆಡಬೇಕು. ಅರಣ್ಯ ರಕ್ಷಣೆ ಜೊತೆಗೆ ನಮ್ಮ ಭೂಮಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವ ನಿಟ್ಟಿನಲ್ಲಿ ಕಾಡನ್ನು ಬೆಳೆಸುವುದು ಅಗತ್ಯ ಎಂದರು.
ಶಾಸಕರ ಹರೀಶ್ ಪೂಂಜ ಮಾತನಾಡಿ, ಶಿಶಿಲ ಮತ್ತು ಚಾರ್ಮಾಡಿಯಲ್ಲಿ ಜಾಗವಿದ್ದು, ಇಲ್ಲಿ 5ರಿಂದ 6ಎಕ್ರೆ ಜಾಗವನ್ನು ಗುರುತಿಸಿ, ಇದನ್ನು ಮಾದರಿ ಅರಣ್ಯವಾಗಿ ಮಾಡುವ ಯೋಜನೆಯನ್ನು ರೂಪಿಸಬಹುದೆಂದು ಸಲಹೆಯಿತ್ತರು. ಎಂ.ಎಲ್.ಸಿ ಪ್ರತಾಪ್ಸಿಂಹ ನಾಯಕ್ ಮಾತನಾಡಿ, ಕಾಡುಪ್ರಾಣಿಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಬೇಲಿ ನಿರ್ಮಾಣ ಮತ್ತು ಸಾರ್ವಜನಿಕರು, ಸಂಘ-ಸಂಸ್ಥೆಗಳ ಸಹಕಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಸಸಿಗಳನ್ನು ಕಾಡಿನಲ್ಲಿ ನಾಟಿ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳುವಂತಗೆ ಸಲಹೆಯಿತ್ತರು.
ಅರಣ್ಯ ಇಲಾಖೆಯ ಸರಕಾರದ ಮುಖ್ಯ ಕಾರ್ಯದರ್ಶಿ ಸಂಜೀವ ಮೋಹನ್, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಹೆಚ್. ಮಂಜುನಾಥ್, ಮಂಗಳೂರು ವೃತ್ತದ ಮುಖ್ಯ ಅರಣ್ಯ ಅಧಿಕಾರಿ ಪ್ರಕಾಶ್ ನೆಟಾಲ್ಕರ್, ತಹಶೀಲ್ದಾರ್ ಮಹೇಶ್ ಜೆ. ಉಪಸ್ಥಿತರಿದ್ದರು.