ಬೆಳ್ತಂಗಡಿ: 2018 ಫೆ.4ರಂದು ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬೃಹತ್ ಹಕ್ಕೊತ್ತಾಯ ಮತ್ತು ಸಮಾವೇಶದಲ್ಲಿ ಶಾಸಕ ಹರೀಶ್ ಪೂಂಜರವರು ಕೊಟ್ಟ ಭರವಸೆಯಂತೆ
ನಮ್ಮ ಸಂಘದ ಕಟ್ಟಡದ ನವೀಕರಣಕ್ಕೆ ತಮ್ಮ ನಿಧಿಯಿಂದ ರೂ. 5.೦೦ ಲಕ್ಷ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ರೂ. 25.೦೦ಲಕ್ಷ ಅಂದರೆ ಒಟ್ಟು ಮೊತ್ತ 3೦.೦೦ಲಕ್ಷ ಅನುದಾನವನ್ನು ಮಂಜೂರು ಮಾಡುವ ಮೂಲಕ ತಮ್ಮ ಮಾತನ್ನು ಉಳಿಸಿದ್ದಾರೆ ಸಮುದಾಯದ ಬಗ್ಗೆ ಸದಾ ಚಿಂತನೆ ಮಾಡುತ್ತಾ ಸಂಘದೊಂದಿಗೆ ನಿಕಟ ಸಂಪರ್ಕದಲ್ಲಿರುವ ತಾಲೂಕಿನ ಏಕೈಕ ನಾಯಕ ಹರೀಶ ಪೂಂಜರವರು ಎಂದು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಹೇಳಿದರು.
ಅವರು ಎ.17 ರಂದು ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಸಮಾಜದ ಸಮಾವೇಶದಲ್ಲಿ ಹಲವಾರು ರಾಜ್ಯ ನಾಯಕರುಗಳು ಭಾಗವಹಿಸಿ ಭರವಸೆಗಳ ಭರವಸೆಯನ್ನೇ ನೀಡಿದ್ದರು. ಆ ಸಂದರ್ಭದಲ್ಲಿ ಮೊದಲ ಬಾರಿ ನಮ್ಮ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಲು ಹರೀಶ್ ಪೂಂಜರಿಗೆ ಅವಕಾಶ ಮಾಡಿಕೊಟ್ಟಿರುತ್ತೇವೆ. ಇದೀಗ ಬೆಳ್ತಂಗಡಿ ತಾಲೂಕಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಹರಿಕಾರ, ತಾಲೂಕಿನ ದೇವಸ್ಥಾನಗಳ ಜೀಣೋದ್ದಾರ, ಬ್ರಹ್ಮಕಲಶೋತ್ಸವದ ಮೂಲಕ ದೇವಸ್ಥಾನಗಳ ಅಭಿವೃದ್ಧಿ ರೂವಾರಿ. ಯುವಕರ ಕಣ್ಮಣಿ, ಯುವ ಮುಂದಾಳು, ಅಪ್ಪಟ ದೇಶಪ್ರೇಮಿ, ತಾಲೂಕಿನ ಹಿಂದುಳಿದ ವರ್ಗದ ಸಮುದಾಯದವರ ಪಾಲಿಗೆ ಪ್ರಾಮಾಣಿಕ ಸೇವೆ ನೀಡುತ್ತಿರುವ ಇವರು ತಾವು ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ಮೂಲ್ಯ/ಕುಂಬಾರ ಸಮುದಾಯದವರಿಗೆ “ದೇವರಾಜ ಅರಸು” ಆಗಿರುತ್ತಾರೆ. ನಮ್ಮ ಸಂಘದ ಇತಿಹಾಸದ ಪುಟದಲ್ಲಿ ಮಾನ್ಯ ಶಾಸಕರಾದ “ಶ್ರೀ ಹರೀಶ ಪೂಂಜರವರು” ಅಚ್ಚಳಿಯದೆ ಉಳಿಯಲಿದ್ದಾರೆ. ಇಂತಹ ಶಾಸಕರನ್ನು ಪಡೆದ ನಾವು ನಿಜವಾಗಿಯೂ ಧನ್ಯರಾಗಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದರು.
ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರ ಸಂಘವು 15.೦2.1981ರಂದು ಸಮಾಜದ ಸಂಘಟನೆಯ ಹಿತದೃಷ್ಟಿಯಿಂದ ಹಿರಿಯರಾದ ಸೇಸಪ್ಪ ಮೂಲ್ಯ ಮಡಂತ್ಯಾರು ಇವರ ಅಧ್ಯಕ್ಷತೆಯಲ್ಲಿ ಮತ್ತು ಉಪಾಧ್ಯಕ್ಷರಾಗಿ ವಾಸುದೇವ ಪೆರಾಜೆ ಕಾರ್ಯದರ್ಶಿಯಾಗಿ ಯದುಚಂದ್ರ ಮಾಲಾಡಿ ಇವರುಗಳ ಜೊತೆ ಹಲವಾರು ನಮ್ಮ ಸಮುದಾಯದ ಹಿರಿಯ ಮುತ್ಸದ್ದಿಗಳ ಪರಿಶ್ರಮದಿಂದ ಸಂಘವು ಸ್ಥಾಪನೆ ಆಗಿದೆ. ಅದರಂತೆ ಸಂಘವು 1987ನೇ ಇಸವಿಯಲ್ಲಿ ಸಂಘಗಳ ನೋಂದಾವಣಾ ಕಾಯಿದೆ 1990ರ ಅಡಿ ನೋಂದಾಯಿತ ಸಂಘವಾಗಿರುತ್ತದೆ. ಮೂಲ್ಯರು ಕುಲಾಲರು ಕುಂಬಾರರು ದೈವದೇವರಲ್ಲಿ ಅಪಾರ ನಂಬಿಕೆ ಇರುವ ಪ್ರಾಮಾಣಿಕವಾಗಿ ಬದುಕನ್ನು ಕಟ್ಟಿಕೊಂಡು ಸಮುದಾಯವನ್ನು ಇನ್ನಷ್ಟು ಮುಖ್ಯವಾಹಿನಿಗೆ ಬರುವಂತೆ ಶ್ರಮಿಸುತ್ತಿದ್ದೇವೆ. ಇಡೀ ಸಮುದಾಯವು ಸಮುದಾಯವು ಶ್ರೀ ಕ್ಷೇತ್ರದ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದೇವೆ.
ಮಂದಿರವನ್ನು ದಿನಾಂಕ 12.೦2.1992ರಂದು ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆ ತಮ್ಮ ದಿವ್ಯ ಹಸ್ತದಿಂದ ಉದ್ಘಾಟನೆ ಮಾಡಿದ್ದನ್ನು ಸ್ಮರಿಸುತ್ತೇವೆ. ಇದೀಗ ಕುಲಾಲ ಮಂದಿರವನ್ನು ಸಂಪೂರ್ಣ ಮರುನವೀಕರಣ ಮಾಡುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 2.50ಲಕ್ಷ ಅನುದಾನ ಮಂಜೂರು ಮಾಡಿರುತ್ತಾರೆ. ಮುಂದಿನ ದಿನದಲ್ಲಿ ನವೀಕರಣದ ಕಟ್ಟಡದ ಉದ್ಘಾಟನೆಗೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿಯವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಕೆ. ಹರೀಶ್ ಕುಮಾರ್ ರವರು ನಮ್ಮ ಸಂಘದಿಂದ ಅಭಿನಂದನೆ ಸ್ವೀಕರಿಸಿ 5.೦೦ಲಕ್ಷ ಅನುದಾನವನ್ನು ಮಂಜೂರು ಮಾಡಿರುತ್ತಾರೆ. ಇವರಿಗೂ ನಾವು ಅಭಾರಿಯಾಗಿರುತ್ತೇವೆ ಎಂದರು.
ಅಭಿನಂದನೆ ಮತ್ತು ವಿದ್ಯಾರ್ಥಿ ವೇತನ ವಿತರಣೆ
ಎ.18ರಂದು (ನಾಳೆ) ಕುಲಾಲ ಮಂದಿರಲ್ಲಿ ವಿಧಾನ ಪರಿಷತ್ ಸದಸ್ಯರು ಹಿರಿಯರು ಆಗಿರುವ ಕೆ. ಪ್ರತಾಪಸಿಂಹ ನಾಯಕ್ ಮತ್ತು ನಮ್ಮ ಸಮಾಜದ ನೂತನ ಗ್ರಾ.ಪಂ ಚುನಾಯಿತ 34 ಮಂದಿ ಸದಸ್ಯರಿಗೆ ಅಭಿನಂದನೆ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸರಕಾರದ ಕೋವಿಡ್-19 ನಿಯಮವನ್ನು ಪಾಲಿಸಿ ಕಾರ್ಯಕ್ರಮ ನಡೆಯಲಿದೆ ಎಂದು ಹರೀಶ್ ಕಾರಿಂಜ ಮಾಹಿತಿ ನೀಡಿದರು.
ಸಂಘದ ಕೋಶಾಧಿಕಾರಿ ವಸಂತ ಕುಲಾಲ್ ಸಂಜಯನಗರ, ಜೊತೆ ಕಾರ್ಯದರ್ಶಿ ಉಮೇಶ್ ಕುಲಾಲ್ ಗುರುವಾಯನಕೆರೆ, ಸದಸ್ಯರಾದ ಹರೀಶ್ ಮೂಲ್ಯ ನಾರಾವಿ ಉಪಸ್ಥಿತರಿದ್ದರು. ಸದಸ್ಯರಾದ ಪುಷ್ಪರಾಜ್ ಕುಲಾಲ್ ಲಾಯಿಲ ಸ್ವಾಗತಿಸಿ, ಉದಯ ಬಿ.ಕೆ ಬಂದಾರು ವಂದಿಸಿದರು.