ದೇವರನ್ನು ಬೇಡುವುದು ಹಾಗು ಧ್ಯಾನಿಸುವುದು ಪರಸ್ಪರ ವಿರುದ್ಧ ಕ್ರಿಯೆಗಳು. ಹೌದು. ದೇವರನ್ನು ಬೇಡುವಾಗ, ಭಕ್ತನ ಮನಸ್ಸು ತನಗೆ ಏನು ಬೇಕೋ ಅದರ ಬಗ್ಗೆ ಚಿಂತಿಸುತ್ತಿರುತ್ತದೆ. ಆದರೆ ಧ್ಯಾನಿಸುವಾಗ, ಮನಸ್ಸು ಚಂಚಲವಾಗದೆ ದೇವರ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆಗ ನಿಮ್ಮ ಜೊತೆ ಮಾತಾಡುವುದು ಅಥವಾ ನಿರ್ದೇಶಿಸುವುದು ದೇವವಾಣಿ. ನೀವು ಮೌನವಾಗಿ ಮನಸ್ಸು ಏಕನಿಷ್ಠೆಯಲ್ಲಿರುವಾಗ ಮಾತ್ರ ಇದು ಸಾಧ್ಯ. ಧ್ಯಾನ ಮಾಡುವಾಗ ವಿಧವಿಧವಾದ ಮುದ್ರೆಗಳನ್ನು ಉಪಯೋಗಿಸುವುದನ್ನು ನೋಡಿರುತ್ತೀರಿ. ಈಗ ನಾವು ಹೇಳಹೊರಟಿರುವುದು ಚಿನ್ಮುದ್ರೆಯ ಬಗ್ಗೆ. ಕೈನ ಪ್ರತೀ ಬೆರಳುಗಳಿಗೂ ಒಂದೊಂದು ಅರ್ಥವಿದೆ.
ಹೆಬ್ಬೆರಳು: ಸರ್ವೋಚ್ಚ ಆತ್ಮವನ್ನು ಪ್ರತಿನಿಧಿಸಿದರೆ, ತೋರುಬೆರಳು ವೈಯಕ್ತಿಕ ಆತ್ಮವನ್ನು ಪ್ರತಿನಿಧಿಸುತ್ತದೆ. ಅಂತೆಯೇ ಮಧ್ಯದ ಬೆರಳು ಅಹಂ ಅನ್ನು, ಉಂಗುರದ ಬೆರಳು ಭ್ರಮೆಯನ್ನು ಹಾಗು ಕಿರುಬೆರಳು ಕರ್ಮವನ್ನು ಪ್ರತಿನಿಧಿಸುತ್ತದೆ.