ಬೆಳ್ತಂಗಡಿ: ರಾಜ್ಯದ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ ಸದಸ್ಯರನ್ನಾಗಿ ಕುತ್ಲೂರು ಗ್ರಾಮದ ನಿವಾಸಿ, ಪ್ರಸ್ತುತ ಉಡುಪಿ ಬ್ರಹ್ಮವಾರ ಹೇರೂರು ರುಡ್ಸೆಟ್ ಸಂಸ್ಥೆಯಲ್ಲಿ ಹಿರಿಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಕರುಣಾಕರ ಜೈನ್ ಅವರು ನೇಮಕಗೊಂಡಿದ್ದಾರೆ.
ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಅವರ ಸೂಚನೆಯ ಮೇರೆಗೆ ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರ ಶಿಫಾರಸ್ಸಿನಂತೆ ರಾಜ್ಯಪಾಲರು ಈ ನೇಮಕಾತಿಯನ್ನು ಮಾಡಿ ಆದೇಶ ಹೊರಡಿಸಿದ್ದಾರೆ.
ಕುತ್ಲೂರು ಗ್ರಾಮದ ಪ್ರತಿಷ್ಠಿತ ಜೈನ ಮನೆತನವಾಗಿದ್ದ ಕೆ.ಎಂ .ನಾಗರಾಜ್ ಜೈನ್(ಕುದ್ರೆ) ಮತ್ತು ಶ್ರೀಮತಿ ಗೋಪಿ ದಂಪತಿಗಳ ಸುಪುತ್ರನಾಗಿರುವ ಕರುಣಾಕರ ಜೈನ್ ಪದವಿಧರರಾಗಿದ್ದು, ಅಖಿಲ ಭಾರತ ವಿಧ್ಯಾರ್ಥಿ ಪರಿಷತ್ನ ಸಕ್ರಿಯ ಸದಸ್ಯನಾಗಿ, ತಾಲ್ಲೂಕು,ವಿಭಾಗ ರಾಜ್ಯ ಮಟ್ಟದಲ್ಲಿ ತಮ್ಮ ಛಾಪನ್ನು ಬೀರಿದವರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಲ್ಲಿ ಸೇವಾನಿರತ ತರಬೇತಿ ಪಡೆದ ಬಳಿಕ ಮಣಿಪಾಲ ಇಂಡಸ್ಟ್ರೀಯಲ್ ಟ್ರಸ್ಟ್ನಲ್ಲಿ ಕ್ಷೇತ್ರಾಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ಉಜಿರೆ ರುಡ್ಸೆಟ್ ಸಂಸ್ಥೆಯಲ್ಲಿ ಕಚೇರಿ ಸಹಾಯಕನಾಗಿ, ನೆಲಮಂಗಲದ ರುಡ್ಸೆಟ್ ಸಂಸ್ಥೆಯಲ್ಲಿ ತರಬೇತುದಾರಿಗೆ ಉಪನ್ಯಾಸಕರಾಗಿ, ಚಿತ್ರದುರ್ಗ ರುಡ್ಸೆಟ್ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಬ್ರಹ್ಮವರ ರುಡ್ ಸೆಟ್ ಹಿರಿಯ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹವ್ಯಾಸಿ ನಾಟಕ ಕಲಾವಿದರಾಗಿರುವ ಇವರು ಕ್ರೀಡೆ, ಸಹಕಾರಿ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕುತ್ಲೂರು ಪರುಷಗುಡ್ಡೆ ಭಗವಾನ್ ಶಾಂತಿನಾಥ ಸ್ವಾಮಿ ಬಸದಿಯ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ, ಪರುಷಗುಡ್ಡೆ ಭಾರತೀಯ ಜೈನ್ ಮಿಲನ್, ಕುತ್ಲೂರು ಇದರ ಜೊತೆ ಕಾರ್ಯದರ್ಶಿಯೂ ಸೇವೆ ಸಲ್ಲಿಸುತ್ತಿದ್ದಾರೆ.