ಉದರ ಘೋಷಣೆಗಾಗಿ ಬೀದಿ-ಬೀದಿ ಅಲೆಯುವ ಕೊಳಲ ಮಾಂತ್ರಿಕ ರವಿ ಅಜೆಕಾರು
ಇಂದು ಸಮಾಜದಲ್ಲೊಬ್ಬ ಉತ್ತಮ ಕಲಾವಿದನಾಗ ಬೇಕು ಎಂದಾದರೆ ಆತ ಬಹಳಷ್ಟು ಸಮಯ ಗುರುಗಳಿಂದ ಪರಿಣತಿ ಪಡೆಯಲೇ ಬೇಕು. ಆದರೆ ವಿದ್ಯಾಭ್ಯಾಸ ಹಾಗೂ ಸಂಗೀತದ ಗಂಧ ಗಾಳಿಯ ಸೋಂಕಿರದ ಅಜೆಕಾರು ಸಮೀಪದ ದೊಡ್ಡಂಗಡಿಯ ರವಿ ಎಂಬ ಹಿರಿಜೀವ ಉದರ ಪೋಷಣೆಗಾಗಿ ಬೀದಿ ಬದಿಯಲ್ಲಿ ತನ್ನ ಪಾಡಿಗೆ ತಾನು ಕುಳಿತು ಕೊಳಲು ಊದಲು ಪ್ರಾರಂಭಿಸಿದರು ಎಂದಾರೆ ಆ ಸ್ವರ ಮಾದುರ್ಯದ ನಾದ, ಕೇಳಿದ ಪ್ರತಿಯೊಬ್ಬರೂ ಮೈ ನವಿರೇಳಿ ಸ್ವರ ಕೇಳಿದತ್ತ ಒಮ್ಮೆ ಕಣ್ಣು ಹಾಯಿಸಲೇ ಬೇಕು.
ಯಾರೊಬ್ಬ ಗುರುಗಳೂ ಇಲ್ಲದೆ ಬಾಲ್ಯದಲ್ಲಿ ದನ ಮೇಯಿಸುವಾಗ ಹವ್ಯಾಸಕ್ಕಾಗಿ ತಾನೆ ಕರಗತವಾಗಿಸಿ ಕೊಂಡ ವಿದ್ಯೆ, ಇಂದು ಅವರ ಕೊನೆ ಕಾಲದಲ್ಲಿ ಹೊಟ್ಟೆ ತುಂಬಿಸಲು ನೆರವಾಗುತ್ತಿರುವುದು ನಿಜಕ್ಕೂ ಶ್ಲಾಘುನೀಯ. ಪ್ರತಿ ವರ್ಷ ಲಕ್ಷದೀಪೋತ್ಸವದ ಸಮಯ ಧರ್ಮಸ್ಥಳಕ್ಕಾಗಮಿಸಿ ನಂತರ ಬೆಳ್ತಂಗಡಿ ಸೇರಿದಂತೆ ಜಿಲ್ಲೆಯಾದ್ಯಂತ ಜಾತ್ರೆ ಇನ್ನಿತರ ಉತ್ಸವಗಳಲ್ಲಿ ಪಾಲ್ಗೊಂಡು ತನ್ನ ಕೊಳಲ ಮಾಂತ್ರಿಕತೆಗೆ ಮರುಳಾದ ಮಂದಿ, ನೀಡುವ ನೆರವಿನಿಂದಲೇ ಜೀವನ ಸಾಗಿಸುವ ರವಿಯಣ್ಣನ ನಿಜವಾದ ಕೊಳಲು, ಪಿವಿಸಿ ಪೈಪಿಗೆ ತೂತು ತೆಗೆದು ತಾನೇ ನಿರ್ಮಿಸಿ ಕೊಂಡ ನೈಜ ಗಾಯನದ ಸಾಧನ.
ಈ ಬಡ ಕಲಾವಿದನಲ್ಲಿ ಯಾಕೆ..?, ನೀವು ಒಂದು ಕೊಳಲು ಕೊಂಡುಕೊಳ್ಳಬಾರದು ಎಂದು ಪ್ರಶ್ನಿಸಿದರೆ, ನನ್ನಲ್ಲೂ ಬಹಳಷ್ಟು ವರ್ಷ ಒಂದು ಉತ್ತಮವಾದ ಸ್ಟೀಲ್ ಕೊಳಲು ಇತ್ತು. ಆದರೆ ೨೦ ವರ್ಷಗಳ ಹಿಂದೆ ಅದನ್ನು ಯಾರೋ ಕದ್ದುಕೊಂಡು ಹೋದರು ಆ ಬಳಿಕ ನನಗೆ ಇದುವೇ ಕೊಳಲು ಎಂದು ಕೈ ಎತ್ತಿ ಕೊಳಲು ತೋರಿಸುವಾಗ ಈ ಬಹು ಭಾಷಾ ಕೊಳಲು ವಾದಕ ಉದರ ವೇದನೆಯ ಅರ್ಥವಾಗುತ್ತದೆ ಸಹಜ.
● ಸುವರ್ಣ ಬೆಳ್ತಂಗಡಿ