ಜಿಲ್ಲಾ ವಾರ್ತೆತಾಲೂಕು ಸುದ್ದಿರಾಜ್ಯ ವಾರ್ತೆ

ಹೊರ ಜಿಲ್ಲೆಗಳಿಂದ ಬರುವವರಿಗೆ ಶಾಲೆಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ 14ದಿನಗಳ ಲಾಕ್‌ಡೌನ್ ಘೋಷಿಸಿರುವುದರಿಂದ ಹೊರ ಜಿಲ್ಲೆ, ಬೆಂಗಳೂರು ಹಾಗೂ ರಾಜ್ಯದ ಇತರ ಕಡೆಗಳಿಂದ ತಾಲೂಕಿಗೆ ಬರುವವರು ಸ್ವ ಇಚ್ಚೆಯಿಂದ ಐದಾರು ದಿನಗಳ ಕಾಲ ತಮ್ಮ ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್‌ಲ್ಲಿದ್ದು, ಕೊರೋನಾ ಮುಕ್ತ ತಾಲೂಕಿಗೆ ಸಹಕರಿಸುವಂತೆ ಶಾಸಕ ಹರೀಶ್ ಪೂಂಜ ವಿನಂತಿಸಿದ್ದಾರೆ.
ಲಾಕ್‌ಡೌನ್ ಇರುವುದರಿಂದ ಬೆಂಗಳೂರು ಹಾಗೂ ಇತರ ಕಡೆಗಳಿಂದ ತಮ್ಮ ಊರಿಗೆ ಬರುವವರನ್ನು ಸ್ವಾಗತಿಸುತ್ತೇವೆ. ಅದರಂತೆ ಬಂದವರು ಐದು ದಿನಗಳ ಕಾಲ ತಮ್ಮ ಊರಿನ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿರಬೇಕು. ಅವರಿಗೆ ಬೇಕಾದ ಊಟ ಹಾಗೂ ಇತರ ವ್ಯವಸ್ಥೆಯನ್ನು ಮನೆಯಿಂದಲೇ ನೀಡಬಹುದು. ಐದು ದಿನಗಳ ಬಳಿಕ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ನೆಗೆಟಿವ್ ಬಂದರೆ ಮನೆಗೆ ಹೋಗಬಹುದು. ಇದು ಮನೆಯವರ ಹಾಗೂ ಊರಿನವರ ಸುರಕ್ಷತಾ ದೃಷ್ಟಿಯಿಂದ ಅತೀ ಅಗತ್ಯ ಎಂದರು. ಇದು ಸರಕಾರದ ವ್ಯವಸ್ಥೆಯಲ್ಲ, ನಮ್ಮ ಊರಿನ ಸುರಕ್ಷತಾ ಹಿನ್ನಲೆಯಲ್ಲಿ ಮಾಡಿದ್ದೇವೆ ಎಂದು ತಿಳಿಸಿದರು.
ಲಾಯಿಲ  ಟಿ.ಬಿ ಆಸ್ಪತ್ರೆ      ಕ್ವಾರಂಟೈನ್ ಕೇಂದ್ರ:
2೦೦ ಬೆಡ್‌ನ ಲಾಯಿಲ   ಟಿ.ಬಿ ಆಸ್ಪತ್ರೆಯನ್ನು ಕಳೆದ ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಕೊರೋನಾ ಪಾಸಿಟೀವ್ ಬಂದವರಿಗೆ ಕ್ವಾರಂಟೈನ್ ಕೇಂದ್ರಕ್ಕೆ ನೀಡಿದ್ದರು. ಈ ಬಾರಿಯೂ ಇದನ್ನು ನೀಡಲು ಒಪ್ಪಿದ್ದಾರೆ. ಇಲ್ಲಿ ಎಲ್ಲಾ ವ್ಯವಸ್ಥೆಗಳಿದ್ದು, ಆರೋಗ್ಯ ಇಲಾಖೆಯಿಂದ ಚಿಕಿತ್ಸಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶಾಸಕರು ಹೇಳಿದರು.
ಬೆಳ್ತಂಗಡಿ ತಾಲೂಕಿನಲ್ಲಿ ಈಗಾಗಲೇ 207 ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 171ಮಂದಿ ಮನೆಯಲ್ಲೇ ಐಸೋಲೇಶನ್‌ಲ್ಲಿ ಇದ್ದಾರೆ. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳ, ಗ್ರಾ.ಪಂ ಪಿಡಿಒಗಳ ಸಭೆ ನಡೆಸಲಾಗಿದ್ದು, ತಾಲೂಕಿನಲ್ಲಿ ಕೊರೊನಾ ಹತೋಟಿಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ತಾಲೂಕು ಕೇಂದ್ರದಲ್ಲಿ ಕಾಲ್ ಸೆಂಟರ್:
ಕೊರೋನಾ ಮುಂಜಾಗೃತಾ ಕ್ರಮವಾಗಿ ತಾಲೂಕಿನಲ್ಲಿ ನಾಳೆ ಕಾಲ್ ಸೆಂಟರ್ ತೆರೆಯಲಾಗುವುದು. ಕೊರೊನಾದ ಬಗ್ಗೆ ಸಮಗ್ರ ಮಹಿತಿ ಇಲ್ಲಿಂದ ನೀಡಲಾಗುವುದು. ನಾಳೆ ಇದರ ನಂಬ್ರವನ್ನು ಮಾಧ್ಯಮದ ಮೂಲಕ ತಾಲೂಕಿನ ಎಲ್ಲರಿಗೂ ತಿಳಿಯುವಂತೆ ಮಾಡಲಾಗುವುದು. ಜನರಿಗೆ ಯಾವುದಾದರೂ ಸಮಸ್ಯೆಗಳು ಎದುರದಾಗ ಈ ಸೆಂಟರ್‌ನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ನಿಮ್ಮದೊಂದು ಉತ್ತರ