ಬೆಳ್ತಂಗಡಿ : ಮೂಡಬಿದಿರೆ, ಬಜಪೆ,
ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಣಿ ದರೋಡೆ ಪ್ರಕರಣ ಹಾಗೂ ಹೊರ ಜಿಲ್ಲೆ ಹಾಗೂ ಜಿಲ್ಲೆಯ ವಿವಿಧೆಡೆ ಮನೆಗಳ್ಳತನ, ದರೋಡೆ ಸುಲಿಗೆ, ವಾಹನ ಸವಾರರ ಸುಲಿಗೆ ಮಾಡುತ್ತಿದ್ದ ಒಟ್ಟು 12 ಪ್ರಕರಣವನ್ನು ಪೊಲೀಸರು ಭೇದಿಸಿದ್ದು, 9 ಮಂದಿ ದರೋಡೆಕೋರರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಬ್ದುಲ್ ರವೂಫ್ (24), ರಾಮಮೂರ್ತಿ (23) ಅಶ್ರಫ್ ಪೆರಾಡಿ(27), ಸಂತೋಷ್(24 , ನವೀದ್(36) . ರಮಾನಂದ ಎನ್ ಶೆಟ್ಟಿ (48), ಸುಮನ್ (24), ಸಿದ್ಧಿಕ್ (27), ಅಲಿಯಾ ಎಂದು ಗುರುತಿಸಲಾಗಿದೆ.
ಸೌತಡ್ಕದಲ್ಲಿ ವಿ.ಹಿಂ.ಪ ವಲಯಾಧ್ಯಕ್ಷ ತುಕ್ರಪ್ಪ ಶೆಟ್ಟಿ ಯವರ ಮನೆ ಮಂದಿಯನ್ನು ಕಟ್ಟಿ ಹಾಕಿ ಮಾಲಕರಿಗೆ ಇರಿದು ಮನೆ ದರೋಡೆ ಪ್ರಕರಣ, ಪುಂಜಾಲಕಟ್ಟೆಯಲ್ಲಿ ಮನೆಕಳ್ಳತನ, ಮೂಡಬಿದಿರೆ, ಬಜಪೆ, ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಣಿ ದರೋಡೆ, ಬೆಂಗಳೂರು ವಿಜಯನಗರದಲ್ಲಿ ಮನೆಕಳ್ಳತನ ಯತ್ನ , ಅರೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಮುಖ ಪ್ರಕರಣಗಳಾಗಿವೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಎರಡು ತಲವಾರು, ಏರ್ ಗನ್, ಒಂದು ಕಬ್ಬಿಣದ ರಾಡು ಒಂದು ಕಬ್ಬಿಣದ ಲಿವರ್ , ಒಂದು ಉದ್ದನೆಯ ಚಾಕು, ಮೆಣಸಿನ ಪುಡಿ ಮರದ ದೊಣ್ಣೆಗಳನ್ನು ವಶಪಡಿಸಿಕೊಳ್ಳಲಾಗಿದೆ
ಈ ಒಂಬತ್ತು ಪ್ರಮುಖ ಆರೋಪಿಗಳಿಗೆ ಕೃತ್ಯವೆಸಗಲು ವಾಹನಗಳನ್ನು ಒದಗಿಸಿದವರು, ಹಣಕಾಸಿನ ಸಹಾಯ ಮಾಡಿದವರು, ಸಂಚು ರೂಪಿಸಲು ಭಾಗಿಯಾದವರು ತಲೆಮರೆಸಿಕೊಳ್ಳಲು ಆಶ್ರಯ ಕೊಟ್ಟವರು ಮುಂತಾದ ರೀತಿಯಲ್ಲಿ ಸುಮಾರು 30ರಿಂದ 35 ಜನ ಆರೋಪಿಗಳು ಈ ಕೃತ್ಯ ದಲ್ಲಿ ವಿವಿಧ ರೀತಿಯಲ್ಲಿ ಆರೋಪಿಗಳೊಂದಿಗೆ ಭಾಗಿಯಾಗಿದ್ದು ಇವರೆಲ್ಲರನ್ನೂ ಹೆಚ್ಚಿನ ತನಿಖೆ ನಡೆಸಿ ಬಂಧಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.