ಮಧ್ವ ಯಕ್ಷಕೂಟದಿಂದ ಯಕ್ಷಗಾನತಾಳಮದ್ದಳೆ:ಪ್ರಶಸ್ತಿ ಪುರಸ್ಕೃತ ಗೋಪಾಕೃಷ್ಣ ಬಂಗೇರರಿಗೆ ಸನ್ಮಾನ
ಪುಂಜಾಲಕಟ್ಟೆ : ಕಾವಳಪಡೂರು ವಗ್ಗ ಪಚ್ಚಾಜೆ ಸಭಾಂಗಣದಲ್ಲಿ ಮಧ್ವ ಯಕ್ಷ ಕೂಟದ ವತಿಯಿಂದ ತಾಳಮದ್ದಳೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೋಪಾಲಕೃಷ್ಣ ಬಂಗೇರ ಇವರಿಗೆ ಅಭಿನಂದನಾ ಕಾರ್ಯಕ್ರಮ ಜ.೧೪ರಂದು ಜರುಗಿತು.
ಅಭಿನಂದನಾ ಕಾರ್ಯಕ್ರಮ ನೆರವೇರಿಸಿದ ಶ್ರೀ ಕ್ಷೇತ್ರ ಕಾರಿಂಜದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ. ಜಿನರಾಜ ಆರಿಗ ಅವರು ಸಾಧನೆಗೆ ತಾನಾಗಿ ಗೌರವ ಪ್ರಾಪ್ತಿಯಾಗುತ್ತದೆ. ಗೋಪಾಲಕೃಷ್ಣ ಬಂಗೇರ ಅವರ ಸಾಧನೆಯ ಹಿಂದೆ ಶ್ರಮ, ನಿಷ್ಠೆ, ತ್ಯಾಗವಿದೆ. ಅವರಿಗೆ ಪ್ರಶಸ್ತಿ ಲಭಿಸಿರುವುದು ನಮ್ಮೂರಿಗೆ, ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ. ಇದು ನಮ್ಮೂರಿನ ಕಿರು ಸನ್ಮಾನ, ಮುಂದಕ್ಕೆ ಮತ್ತಷ್ಟು ಗೌರವ ಲಭಿಸಲಿ. ಯಕ್ಷಗಾನಕ್ಕೆ ನಿರಂತರ ಪ್ರೋತ್ಸಾಹ ನೀಡುವ ಮಧ್ವ ಯಕ್ಷಕೂಟದ ಕಾರ್ಯ ಅಭಿನಂದನೀಯ ಎಂದರು.
ಕಾವಳಪಡೂರು ಗ್ರಾ.ಪಂ ಸದಸ್ಯೆ ಭವಾನಿ ಶ್ರೀಧರ ಪೂಜಾರಿ, ಕಾರಿಂಜ ಯಕ್ಷವಾಸ್ಯಮ್ ಸಂಚಾಲಕಿ ಸಾಯಿ ಸುಮ ಭಟ್ ಕಾರಿಂಜ, ಗ್ರಾ.ಪಂ ಮಾಜಿ ಸದಸ್ಯ ಪ್ರಭಾಕರ ಅಮೀನ್, ಯಕ್ಷಕೂಟ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಕ ಉದಯಕುಮಾರ್ ಜೈನ್ ಸ್ವಾಗತಿಸಿದರು. ಯಕ್ಷ ಕೂಟ ಅಧ್ಯಕ್ಷ ಭಾಸ್ಕರ ಶೆಟ್ಟಿ ಪ್ರಸ್ತಾಪಿಸಿದರು. ಬಳಿಕ ಯಕ್ಷಗಾನ ತಾಳಮದ್ದಳೆ ನಡೆಯಿತು.