ಕೃಷಿಕರಿಗೆ ಕುಮ್ಕಿ ಭೂಮಿ: ಹಲವು ವರ್ಷಗಳ
ಬೇಡಿಕೆ ಈಡೇರುವ ಹಂತದಲ್ಲಿ
ಬೆಳ್ತಂಗಡಿ: ಕರಾವಳಿಯಲ್ಲಿ ಕೃಷಿಕರಿಗೆ ಕುಮ್ಕಿ ಭೂಮಿ ಶಾಶ್ವತವಾಗಿ ಅನುಭವಿಸುವ ಹಕ್ಕು ನೀಡಬೇಕು ಎಂಬ ಬಹು ವರ್ಷಗಳ ಬೇಡಿಕೆಗೆ ಕಂದಾಯ ಸಚಿವರು ಒಪ್ಪಿಗೆ ನೀಡಿದ್ದು, ಮುಂದಿನ ಹಂತದ ಪ್ರಕ್ರಿಯೆಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಕರಾವಳಿ, ಮಲೆನಾಡಿನಲ್ಲಿ ಸುಮಾರು 130 ವರ್ಷಗಳ ಹಿಂದೆ ಬ್ರೀಟಿಷ್ ಸರಕಾರದ ಅವಧಿಯಲ್ಲಿ ನೀಡಲಾಗಿದ್ದ, ಕುಮ್ಕಿ, ಬಾಣೆ, ಸೊಪ್ಪಿನ ಬೆಟ್ಟ ಜಮೀನನ್ನು ಶಾಶ್ವತವಾಗಿ ಅನುಭೋಗದಾರನ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಬೇಕು ಎಂಬ ಬೇಡಿಕೆಗೆ ಸರಕಾರದ ಮಟ್ಟದಲ್ಲಿ ಸ್ಪಂದನೆ ವ್ಯಕ್ತವಾಗಿರುವುದು ಹೊಸ ನಿರೀಕ್ಷೆ ಮೂಡಿಸಿದೆ.
ದ.ಕ ಜಿಲ್ಲೆ ಮದರಾಸು ಪ್ರಾಂತ್ಯದ ಅಳಡಳಿತದಡಿ ಇದ್ದ ಸಂದರ್ಭದಲ್ಲಿ ಆಗಿನ ಕಂದಾಯ ಅಳೆತೆಯಂತೆ ಕದೀಂ ವರ್ಗ ಜಮೀನಿನಲ್ಲಿ ಕೃಷಿ ಮಾಡುವ ರೈತರಿಗೆ ಅದರ ಸುತ್ತಲಿನ 450 ಲಿಂಕ್ಸ್/100 ಗಜ(90 ಮೀ) ಸರಕಾರಿ ಜಮೀನನ್ನು ಕುಮ್ಮಿ ಸವಲತ್ತಿನ ಜಮೀನು ಎಂದು ಪರಿಗಣಿಸಿ ನೀಡಲಾಗಿತ್ತು. ಕೃಷಿ ಪೂರಕ ಉದ್ದೇಶಕ್ಕಾಗಿ ಬಳಸಲು ಅವಕಾಶ ಕಲ್ಪಿಸಲಾಗಿತ್ತು. ಈ ಜಾಗದ ಮೇಲೆ ರೈತರಿಗೆ ಕೃಷಿಗೆ ಪೂರಕವಾಗಿ ಅನುಭೋಗಿಸುವ ಹಕ್ಕು ಮಾತ್ರ ನೀಡಲಾಗಿತ್ತು.
1973ರ ತನಕ ಕುಮ್ಮಿ ಜಮೀನನ್ನ ಕದೀಂದಾರರಿಗೆ ದರ್ಖಾಸು ನೆಲೆಯಲ್ಲಿ ಮಂಜೂರು ಮಾಡಲಾಗಿತ್ತು. ಬಳಿಕ ಇದನ್ನು ಸ್ಥಗಿತಗೊಳಿಸಲಾಗಿತ್ತು. ಅನಂತರ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಅಕ್ರಮ-ಸಕ್ರಮದಡಿ ಮಂಜೂರು ಮಾಡಲು ನೀಡಲಾಯಿತು
2010ರಲ್ಲಿ ಕುಮ್ಕಿ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಹೊರತುಪಡಿಸಿ ಇನ್ನಿತರವಾಗಿ ಮಂಜೂರು ಮಾಡಬಾರದು ಎಂದು ನಿರ್ದೇಶನ ನೀಡಲಾಯಿತು. 2013ರಲ್ಲಿ ಮತ್ತೆ ರೈತರಿಗೆ ಮಂಜೂರು ಮಾಡುವ ಬಗ್ಗೆ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಅದು ಈ ತನಕ ಕಾರ್ಯಗತಗೊಂಡಿರಲಿಲ್ಲ.