ತಾಲೂಕು ಸುದ್ದಿ

ಆ.29: ಸ್ವಾತಂತ್ರ್ಯವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಬೆಳ್ತಂಗಡಿ ನಾಗರಿಕರಿಂದ ಸ್ವಾಗತ ಕಾರ್ಯಕ್ರಮ

 

ಬೆಳ್ತಂಗಡಿ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಂಗ್ಲೆಂಡ್‌ನ ಬಾವುಟವನ್ನು ಕಿತ್ತೆಸೆದು ನಮ್ಮ ನೆಲದ ಬಾವುಟವನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಹಾರಿಸಿ, 13 ದಿವಸಗಳ ಕಾಲ ಮಂಗಳೂರನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿಗೊಳಿಸಿದ ಸಂಘಟನಕಾರ ಸ್ವಾತಂತ್ರ್ಯ ಸಮರವೀರ, ತುಳುನಾಡಿನ ಕೆಚ್ಚೆದೆಯ ವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದ ಆ.29ರಂದು ಬಂಟ್ವಾಳದಲ್ಲಿ ನಡೆಯುವ ಶೋಭಾ ಯಾತ್ರೆಯಲ್ಲಿ ಬೆಳ್ತಂಗಡಿ ತಾಲೂಕಿನ ನಾಗರಿಕರಿಂದ ಭವ್ಯ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.


ಅವರು ಆ.23ರಂದು ಬೆಳ್ತಂಗಡಿ ಎಸ್‌ಡಿಎಂ ಕಲಾಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದವೆಂದು ಕರೆಯಲ್ಪಡುವ ಸಿಪಾಯಿದಂಗೆಕ್ಕಿಂತ 20 ವರುಷಗಳ ಮೊದಲು ಅಂದರೆ 1837 ರಲ್ಲಿ ಬ್ರಿಟಿಷರ ದೌರ್ಜನ್ಯ ಹಾಗೂ ದಬ್ಬಾಳಿಕೆಯ ವಿರುದ್ಧ ಶಸ್ತ್ರ ಸಜ್ಜಿತವಾಗಿ ಹೋರಾಡಲು ಸಾವಿರಾರು ಬೇರೆ ಬೇರೆ ಜನಾಂಗಕ್ಕೆ ಸೇರಿದ ರೈತಾ ಮಹಾ ಸೈನಿಕರನ್ನು ತನ್ನ ಮದುವೆಗದ್ದೆ ಜಮೀನಿನಲ್ಲಿ ಒಗ್ಗೂಡಿಸಿ, ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದವರು ಕೆದಂಬಾಡಿ ರಾಮಯ್ಯ ಗೌಡರು ಎಂದರು.
ಆ.29ರಂದು ಬಂಟ್ವಾಳದಲ್ಲಿ ಪ್ರತಿಮೆಯ ಶೋಭಾ ಯಾತ್ರೆ ವೇಳೆ ಬೆಳ್ತಂಗಡಿ ತಾಲೂಕಿನ ನಾಗರಿಕರಿಂದ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ತಾಲೂಕಿನಿಂದ ಸುಮಾರು 5೦೦ ವಾಹನಗಳಲ್ಲಿ ನಾಗರಿಕರು ಹೋಗಿ ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ 1 ಗಂಟೆಗೆ ವಾಣಿ ಕಾಲೇಜು ಹಾಗೂ ಎಪಿಎಂಸಿ ಮೈದಾನದಲ್ಲಿ ಒಟ್ಟು ಸೇರಿ ಅಲ್ಲಿಂದ ವಾಹನದ ಮೂಲಕ ಬಂಟ್ವಾಳಕ್ಕೆ ತೆರಳಿ ಶೋಭಾ ಯಾತ್ರೆಯಲ್ಲಿ ಭಾಗವಹಿಸುದಾಗಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಗೌರವಾಧ್ಯಕ್ಷ ಪದ್ಮಗೌಡ ಬೆಳಾಲು, ಪಟ್ಟಣ ಪಂಚಾಯತು ಉಪಾಧ್ಯಕ್ಷ ಜಯಾನಂದ ಗೌಡ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ