ತಾಲೂಕು ಸುದ್ದಿ

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ

ಬೆಳ್ತಂಗಡಿ: ಆದಿವಾಸಿಗಳ ಮೇಲಿನ ದೌರ್ಜನ್ಯ ಮಿತಿ ಮೀರಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ತಮ್ಮ ತಾಳ್ಮೆಗೂ ಮಿತಿ ಇದೆ. ಅದು ಮೀರಿದರೆ ಗಂಭೀರ ಸ್ವರೂಪದ ಹೋರಾಟ ಎದುರಿಸಲು ಸಿದ್ದರಾಗಬೇಕಾಗುತ್ತದೆ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಕಾನೂನು ಸಲಹೆಗಾರ, ನ್ಯಾಯವಾದಿ ಶಿವಕುಮಾರ್ ಎಸ್. ಎಂ ಎಚ್ಚರಿಕೆ ನೀಡಿದರು.


ಅವರು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆದಿವಾಸಿಗಳ ಮೇಲಿನ ದೌರ್ಜನ್ಯ ನಿಲ್ಲಿಸಲು ಆಗ್ರಹಿಸಿ, ಹಾಗೂ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ, ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಮಾತಾಡುತ್ತಾ ಆದಿವಾಸಿಗಳು ಕಾಡುಪ್ರಾಣಿಗಳ ಜೊತೆಗೆ ಹೋರಾಟದ ಮೂಲಕ ಜೀವನ ನಡೆಸಿದ ಚರಿತ್ರೆ ಹೊಂದಿದವರು. ನಮ್ಮ ತಾಳ್ಮೆಗೂ ಮಿತಿ ಇದೆ ನಮ್ಮ ಸಹನೆ ನಮ್ಮ ದೌರ್ಬಲ್ಯವಲ್ಲ . ಆದಿವಾಸಿಗಳ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ತಾಲೂಕು ಕಛೇರಿ ಎದುರು ನಿರಂತರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಚಾಲಕ ಶೇಖರ್ ಲಾಯಿಲ ಮಾತನಾಡುತ್ತಾ ಸ್ವಾತಂತ್ರ್ಯ ಅಮೃತೋತ್ಸವ ಆಚರಿಸುವ ದೇಶದಲ್ಲಿ ಆದಿವಾಸಿಗಳು ರಸ್ತೆ, ವಿದ್ಯುತ್ ಇಲ್ಲದೆ ವಾಸಿಸುತ್ತಿರುವುದು ದುರಂತ. ದಿಡುಪೆ- ಸಂಸೆ ರಸ್ತೆಗೆ ಅನುಮತಿ ಪಡೆಯಲು ಪ್ರಯತ್ನಿಸುವ ಶಾಸಕರು ತಾಲೂಕಿನ ಇತರೆ ಪ್ರದೇಶಗಳನ್ನು ನಿರ್ಲಕ್ಷ್ಯ ಮಾಡಿ ಆದಿವಾಸಿಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಿದರು. ತಾಲೂಕು ಅಧ್ಯಕ್ಷ ವಸಂತ ನಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ನೀಲಯ್ಯ ಪಂಜಲು, ಪ್ರವೀಣ ಪೆರಿಂಚ , ಹೊನ್ನಯ್ಯ ಎರ್ದಡಿ , ವಿಶ್ವನಾಥ ಪೆರಿಂಚ , ಪೂವಪ್ಪ ಮಲೆಕುಡಿಯ, ಲಿಂಗಪ್ಪ ಮಲೆಕುಡಿಯ, ರವಿ ಮಲೆಕುಡಿಯ, ಉದಯ ಮಲೆಕುಡಿಯ, ಪುರುಷೋತ್ತಮ ಮಲೆಕುಡಿಯ, ಸುಜಾತ ಹೆಗ್ಡೆ , ಚೀಂಕ್ರ ಮಲೆಕುಡಿಯ, ವಾರಿಜ ಎರ್ದಡಿ, ನ್ಯಾಯವಾದಿ ಸುಕನ್ಯಾ ಹೆಚ್ ವಹಿಸಿದ್ದರು.

ನಿಮ್ಮದೊಂದು ಉತ್ತರ