ಕ್ರೈಂ ವಾರ್ತೆ

ಕುಡಿತ ಮತ್ತಿನಲ್ಲಿ ಕತ್ತಿಯಿಂದ ಕಡಿದು ಮಗನನ್ನು ಕೊಂದು ನೇಣಿಗೆ ಶರಣಾದ ತಂದೆ

ಬೆಳ್ತಂಗಡಿ: ಕುಡಿದ ಮತ್ತಿನಲ್ಲಿದ್ದ ತಂದೆ ತನ್ನ ಮಗನೊಂದಿಗೆ ಕ್ಷುಲ್ಲಕ ವಿಷಯದಲ್ಲಿ ಗಲಾಟೆ ಎಬ್ಬಿಸಿ, ತಂದೆ-ಮಗನನ್ನು ಕತ್ತಿಯಿಂದ ಕಡಿದು ಕೊಂದು ನಂತರ ಹೆದರಿ ನೇಣಿಗೆ ಶರಣಾದ ದುರಂತ ಘಟನೆ ಪುಂಜಾಲಕಟ್ಟೆಯ ಪಿಲಾತಬೆಟ್ಟು ಎಂಬಲ್ಲಿ ಜೂ. 23ರಂದು ಸಂಜೆ ನಡೆದಿದೆ.

ಪಿಲಾತಬೆಟ್ಟು ಗ್ರಾಮದ ದೈಕಿನ ಭಜನಾ ಮಂದಿರದ ಸಮೀಪ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ, ವಿದ್ಯಾರ್ಥಿ ಸಾತ್ವಿಕ್ (16 ವರ್ಷ) ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರು. ಮಗನ ಸಾವನ್ನು ಕಂಡ ತಂದೆ ಬಾಬು ನಾಯ್ಕ (58 ವರ್ಷ) ಅವರು ತಮ್ಮ ಬಾಡಿಗೆ ಮನೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಮೂಲತಃ ಕಾವಳಕಟ್ಟೆ ನೆಲ್ಲಿಗುಡ್ಡೆಯ ನಿವಾಸಿಗಳಾದ ಬಾಬು ನಾಯ್ಕ ಅವರು ತನ್ನ ಪತ್ನಿ ಶ್ರೀಮತಿ ಸುಗಂಧಿ ಪುತ್ರ ಸಾತ್ವಿಕ್ ಅವರ ಜೊತೆ ಕಳೆದ ನಾಲ್ಕು ವರ್ಷಗಳಿಂದ ಪಿಲಾತಬೆಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸಾತ್ವಿಕ್ ಸ್ಥಳೀಯ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದಾನೆ. ತಾಯಿ ಸುಗಂಧಿ ಸ್ಥಳೀಯ ಕ್ಯಾಶ್ಯು ಫಾಕ್ಟೀರಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಾರೆ.
ಬಾಬು ನಾಯ್ಕ ಅವರು ಕುಡಿತದ ಚಟವನ್ನು ಹೊಂದಿದ್ದು, ಆಗಾಗ ಮನೆಗೆ ಬಂದು, ಮಗ ಮತ್ತು ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ, ಜೂ 23ರಂದೂ ಸಹ ಕುಡಿದ ಅಮಲಿನಲ್ಲೇ ಮನೆಗೆ ಬಂದಿದ್ದ ಬಾಬು ನಾಯ್ಕ ಮತ್ತು ಮಗ ಸಾತ್ವಿಕ್ ನಡುವೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಹೊಯಿ ಕೈ ಯಾದಾಗ, ಬಾಬು ನಾಯ್ಕ ಅವರು ಮಗನಿಗೆ ಕತ್ತಿಯಿಂದ ಕಡಿದರೆನ್ನಲಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಸಾತ್ವಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನು ಕಂಡು ಹೆದರಿದ ಬಾಬು ನಾಯ್ಕ ಗಾಯಗೊಂಡ ಸ್ಥಿತಿಯಲ್ಲೇ ರೂಮಿನ ಪಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಲಾಟೆ ನಡೆಯುವ ಸಂದರ್ಭದಲ್ಲಿ ಅಪ್ಪ, ಮಗ ಮಾತ್ರ ಮನೆಯಲ್ಲಿದ್ದರೆಂದು ವರದಿಯಾಗಿದೆ. ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ